ಇತ್ತೀಚೆಗೆ ಒಂದರ ಹಿಂದೆ ಒಂದು ಹಾರರ್ ಸಿನಿಮಾಗಳು ನಿರ್ಮಾಣವಾಗುತ್ತಲೇ ಇವೆ. ಆದರೆ ಬಹುತೇಕವು ಮೂಢ ನಂಬಿಕೆಗಳಿಗಷ್ಟೇ ಒತ್ತು ನೀಡಿದ ಸಬ್ಜೆಕ್ಟ್ಗಳಾಗಿರುತ್ತವೆ. ಆದರೆ, ಎ. ಸತ್ಯನಾರಾಯಣ ರೆಡ್ಡಿ ಮತ್ತು ಓಂಕಾರ ರೆಡ್ಡಿ ಜೊತೆಸೇರಿ ಶ್ರವಂತಿ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಇನ್ನೂ ಹೆಸರಿಡದ ಪ್ರೊಡಕ್ಷನ್ ನಂ.೧ ಹೆಸರಿನ ಹಾರರ್ ಚಿತ್ರವೊಂದು ಮೊನ್ನೆ ಸೆಟ್ಟೇರಿದೆ.
ಎಲ್ಲೆಂದರಲ್ಲಿ ಬಾಂಬ್ ಬ್ಲಾಸ್ಟ್ಗಳಾಗುತ್ತಿರುತ್ತವೆ. ಇದಕ್ಕೆ ಕಾರಣರಾದ ತಂಡವೊಂದು ಬಂಗಲೆಯೊಂದರಲ್ಲಿ ಅಡಗಿ ಕುಳಿತಿರುತ್ತದೆ. ಆದರೆ ಅಲ್ಲಿ ಭೂತ ಚೇಷ್ಟೆಯ ನಾನಾ ವರಸೆ ಶುರುವಾಗುತ್ತದೆ. ಜೊತೆಗೆ ಆ ಮನೆಯಲ್ಲಿ ಅಡಿಗಿರುವ ಉಗ್ರರನ್ನು ಕಂಡು ಹಿಡಿದು ಮಟ್ಟ ಹಾಕಲು ಡಿಸಿಪಿ ಒಬ್ಬರು ಮಂತ್ರವಾದಿಯ ವೇಷದಲ್ಲಿ ಬರುತ್ತಾರೆ. ಆ ಮಂತ್ರವಾದಿ ವೇಷದ ಡಿಸಿಪಿ ಉಗ್ರರನ್ನು ಸೆರೆ ಹಿಡಿಯುತ್ತಾರಾ? ಭೇಟೆಗೆ ಬಂದ ಡಿಸಿಪಿಯೇ ಭೂತದ ಕೈಗೆ ಸಿಕ್ಕುಬೀಳುತ್ತಾರಾ? ಅಥವಾ ದುಷ್ಟ ಶಕ್ತಿಗಳೆಲ್ಲವನ್ನೂ ಡಿಸಿಪಿ ಸದೆಬಡೆಯುತ್ತಾರಾ? ಎಂಬಿತ್ಯಾದಿ ಕುತೂಹಲ ಮತ್ತು ಥ್ರಿಲ್ಲಿಂಗ್ ಅಂಶಗಳನ್ನು ಒಳಗೊಂಡ ಈ ಚಿತ್ರದಲ್ಲಿ ಪ್ರೀತಿಯ ಪ್ರಧಾನ ಎಳೆ ಕೂಡಾ ಸಮ್ಮಿಳಿತವಾಗಿದೆಯಂತೆ. ಒಟ್ಟಾರೆ ಸಸ್ಪೆನ್ಸ್, ಹಾರರ್ ಮತ್ತು ರೊಮ್ಯಾಂಟಿಕ್ ಅಂಶಗಳನ್ನು ಒಂದೇ ಚಿತ್ರದಲ್ಲಿ ತೆರೆಗರ್ಪಿಸಲು ಹೊರಟಿರುವವರು ತೆಲುಗಿನ ಖ್ಯಾತ ನಿರ್ದೇಶಕ ಕೆ.ಆರ್. ವೆಂಕಟೇಶ್. ತೆಲುಗಿನಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ಕೆ.ಆರ್. ವೆಂಕಟೇಶ್ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಕಾಲಿಟ್ಟಿದ್ದಾರೆ.
ಈ ಚಿತ್ರದಲ್ಲಿ ಅಲ್ಲು ವಂಶಿ ಮತ್ತು ನಿತೀಶ್ ಎಂಬ ಇಬ್ಬರು ಹೀರೋಗಳಿದ್ದಾರೆ. ಈಗಾಗಲೇ ಮಾಡೆಲಿಂಗ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿರುವ ಮತ್ತು ಮಿಸ್ ಕರ್ನಾಟಕ ಪಟ್ಟವನ್ನು ಅಲಂಕರಿಸಿದ್ದ ಶಿಲ್ಪಾ ಎಂಬ ಬೆಂಗಳೂರು ಬೆಡಗಿ ನಾಯಕಿಯಾಗಿ ನಟಿಸುತ್ತಿದ್ದಾಳೆ. ಕುರಿರಂಗ, ಬುಲೆಟ್ ಪ್ರಕಾಶ, ತುಮಕೂರು ಮೋಹನ್ರಂಥ ಅನೇಕ ಪೋಷಕ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪರಂಧಾಮ ಈ ಚಿತ್ರದ ಛಾಯಾಗ್ರಾಹಕರು. ಬೆಂಗಳೂರು ಮತ್ತು ಚಿಕ್ಕಮಗಳೂರಿನ ಸುತ್ತ ಸುಮಾರು ನಲವತ್ತೈದು ದಿನಗಳ ಕಾಲ ಚಿತ್ರೀಕರಣ ನಡೆಸುವ ಪ್ಲಾನು ಚಿತ್ರತಂಡದ್ದು.